Darbha grass is used as “pavithra” in rituals and is a tradition followed by Gowda Saraswats. This grass is considered sacred material and has references to it in the vedas and upanishads for its ability to purify offerings. Bearing the scientific name Desmotachya bipinnata, this grass is also commonly called Kusha grass. The below write up is in Kannada language and is a collection of articles from various sources. We do not know the author or the person who compiled all these information; we wholeheartedly thank the person for taking time to put together various details regarding Darbha grass. We found this information useful and felt it would be beneficial to the community members to understand the background, importance and its usages. The information has been edited to present the details in a specific order.


ದರ್ಭೆ ಹುಲ್ಲು ಮೇಲ್ನೋಟಕ್ಕೆ ವ್ಯರ್ಥವಾಗಿ ಬೆಳೆಯುವ ಹುಲ್ಲು. ಆದರೆ ವಾತಾವರಣದಲ್ಲಿರುವ ದುಷ್ಟಶಕ್ತಿಯನ್ನು ನಿಯಂತ್ರಿಸುವ ಅಮೋಘ ಶಕ್ತಿ ದರ್ಭೆಗಿದೆ. ಅದಕ್ಕಾಗಿ ಯಜ್ಞ-ಯಾಗದಿಗಳಲ್ಲಿ ದರ್ಭೆಯನ್ನು ಉಂಗುರವಾಗಿ ಧರಿಸುತ್ತಾರೆ ಹಾಗು ದುಷ್ಟ ಶಕ್ತಿ ನಿಯಂತ್ರಕವಾಗಿ ಯಜ್ಞಕುಂಡದ ಸುತ್ತಲೂ ದರ್ಬೆಯನ್ನು ಇಡುತ್ತಾರೆ. ಬನ್ನಿ, ಇದರ ಅಸ್ಥಿತ್ವ, ಮಹತ್ವವನ್ನು ಅರಿಯೋಣ.
ಧರ್ಭೆಗಳ ಸೃಷ್ಟಿಯ ಬಗ್ಗೆ ಪುರಾಣದಲ್ಲಿ ಹಲವಾರು ಉಲ್ಲೇಖಗಳಿವೆ. ಹಿಂದೆ ಭಗವಂತನು ದೇವತೆಗಳಿಗೆ ಹಾಗೂ ಮನುಷ್ಯರಿಗೆ ಮಾಧ್ಯಮವಾಗಿ ಯಜ್ಞವನ್ನು ಸೃಷ್ಟಿಸಿದನು. ಆದರೆ ಆ ಯಜ್ಞದ ಆಹುತಿ ದೇವತೆಗಳಿಗೆ ತಲುಪುತ್ತಿರಲಿಲ್ಲ. ಅದರಂತೆ ಮನುಷ್ಯನು ಮಾಡಿದ ಶ್ರಾದ್ಧವೂ ಪಿತೃದೇವತೆಗಳಿಗೆ ತಲುಪುತ್ತಿರಲಿಲ್ಲ. ಯಾಕೆಂದರೆ ಯಜ್ಞವನ್ನು ಹಾಗೂ ಶ್ರಾದ್ಧವನ್ನು ರಾಕ್ಷಸರು ಮುಟ್ಟಿ ಅದನ್ನು ಅಶುಚಿ ಮಾಡುತ್ತಿದ್ದರು. ಆಗ ದೇವತೆಗಳು ಮತ್ತು ಪಿತೃಗಳು ಭಗವಂತನನ್ನು ಪ್ರಾರ್ಥಿಸಲು, ವಿಷ್ಣುವು ವರಾಹ ಅವತಾರ ತಾಳಿ ಒಮ್ಮೆ ಭೂಮಿಯ ಮೇಲೆ ನಿಂತು ಮೈ ಕೆಡವಿದಾಗ ಅವನ ಶರೀರದ ಕೆಲವು ರೋಮಗಳು ಬಿದ್ದು ಧರ್ಭೆಗಳಾದವು ಎಂದು ಹೇಳಲಾಗಿದೆ. ಹೀಗೆ ಭಗವಂತನು ವರಾಹ ರೂಪಿಯಾಗಿ ಬಂದು ತನ್ನ ರೋಮದಿಂದ ದರ್ಭೆಯನ್ನು ಸೃಷ್ಟಿಸಿ ಅದನ್ನು ಯಜ್ಞ ಹಾಗೂ ಶ್ರಾದ್ಧದ ರಕ್ಷಣೆಗೆ ನೀಡಿದನು. ಅಂದಿನಿಂದ ದರ್ಭೆಯ ಸ್ಪರ್ಶವಾದರೆ ದೈತ್ಯರು ಓಡಿಹೋಗುತ್ತಾರೆ. ಆದ್ದರಿಂದ ದರ್ಭೆಯಿಲ್ಲದೆ ಯಜ್ಞವನ್ನು ಹಾಗೂ ಶ್ರಾದ್ಧವನ್ನು ಮಾಡಲೇ ಬಾರದು. ರೋಮಗಳು ಬಿದ್ದ ಸ್ಥಳವು ಬಹ್ಮಿಷ್ಮತಿ (ದರ್ಭೆಗಳ ಪ್ರದೇಶ) ಎಂದು ಖ್ಯಾತವಾಯಿತು ಅಲ್ಲದೆ ಅದು ಸ್ವಾಯಂಭುವ ಮನುವಿನ ರಾಜಧಾನಿಯಾಗಿತ್ತು.
ಇದಲ್ಲದೆ ಹಿಂದೆ ಸಮುದ್ರ ಮಥನದ ಸಂದರ್ಭದಲ್ಲಿ ಮಹಾವಿಷ್ಣು ಮಂಧಾರ ಪರ್ವತಕ್ಕೆ ಆಸರೆಯಾಗಲು ಕೂರ್ಮಾವತಾರ ತಾಳಿದಾಗ ಆಮೆಯ ಮೈಯ ಕೆಲವು ರೋಮಗಳು ಮಂಥನದ ಘರ್ಷಣೆಯಿಂದ ಉದುರಿ ಸಮುದ್ರದಲ್ಲಿ ಬೀಳುತ್ತವಂತೆ.ಇವುಗಳೇ ಕ್ರಮೇಣ ಕುಶ ಆಗಿ ಕರೆಯಲ್ಪಟ್ಟವು ಎಂಬ ಪ್ರತೀತಿ ಇದೆ. ಕುಶಮೂಲೇ ಸ್ಥಿತೋ ಬ್ರಹ್ಮಾ ಕುಶಮಧ್ಯೇ ತು ಕೇಶವಃ ಕುಶಾಗ್ರೇ ಶಂಕರಂ ವಿದ್ಯಾತ್ ಸರ್ವದೇವಾಃ ಸಮಂತತಃ।। ಎಂದಂತೆ ದರ್ಬೆಯ ಆಗ್ರದಲ್ಲಿ ಶಿವನು, ಮಧ್ಯದಲ್ಲಿ ವಿಷ್ಣುವು, ಬುಡದಲ್ಲಿ ಬ್ರಹ್ಮನು ಉಪಸ್ಥಿತರಿರುತ್ತಾರೆ ಎಂದು ನಂಬಲಾಗಿದೆ.
ಪುರಾಣದಲ್ಲಿ ಹೀಗೂ ವಿವರಿಸಲಾಗಿದೆ; ಬ್ರಹ್ಮ ದೇವನು ಸೃಷ್ಠಿಯನ್ನು ಮಾಡುವವನು, ವಿಷ್ಣುವು ಸ್ಥಿತಿಕರ್ತನು, ಶಿವನು ಲಯಕರ್ತನು. ಒಮ್ಮೆ ಶಿವನಿಗೆ ತಾನೇ ಎಲ್ಲರಿಗೂ ಮೇಲೆಂದು ಅಹಂಕಾರ ಬಂದಿತು. ಆ ಕಡೆ ಸೃಷ್ಠಿಕರ್ತ ಬ್ರಹ್ಮನಿಗೂ ತಾನೇ ಮೇಲೆಂದು ಅಹಂಕಾರ ಬಂದಾಗ ಇಬ್ಬರ ವಾದ-ವಿವಾದದಲ್ಲಿ ಶಿವನು ಬ್ರಹ್ಮನ ನಾಲ್ಕನೇ ತಲೆಯನ್ನು ತನ್ನ ಕೈಯಿಂದ ಕಿತ್ತು ತೆಗೆದಾಗ ಬ್ರಹ್ಮಹತ್ಯಾದೆ ದೋಷ ಬಂದಿತು ಹಾಗೂ ಜಗತ್ತೂ ದೋಷಯುಕ್ತವಾಯಿತು. ಯಜ್ಞ-ಯಾಗಾದಿಗಳನ್ನು ಮಾಡುವುದು ಕಠಿಣವಾಯಿತು. ಆಗ ಎಲ್ಲಾ ದೇವತೆಗಳು ಮತ್ತು ಋಷಿಮುನಿಗಳು ಸೇರಿ ಈ ಎಲ್ಲಾ ದೋಷ ನಿವಾರಣೆಗೆ ದರ್ಭೆಯನ್ನು ಭೂಲೋಕಕ್ಕೆ ತರಬೇಕಾಯಿತು ಮತ್ತು ಶಿವನು ತನ್ನ ಹೆಬ್ಬೆರಳು ಮತ್ತು ಉಂಗುರ ಬೆರಳಿನಿಂದ ಬ್ರಹ್ಮನ ಶಿರವನ್ನು ತೆಗೆದುದರಿಂದ ಶುದ್ಧಿಗಾಗಿ ಪೂಜಾ ಅಧಿಕಾರ ಪ್ರಾಪ್ತಿಗಾಗಿ ದರ್ಭೆಯ ಪವಿತ್ರ ಉಂಗುರ ಧರಿಸಬೇಕೆಂದು ನಿಯಮಿಸಲಾಯಿತು.
ಇದಲ್ಲದೆ ಪೂರ್ವದಲ್ಲಿ ಮಾನವರು ಬಹುವಿಧವಾದ ದಾನಗಳನ್ನು ಮಾಡುತ್ತಿದ್ದರು. ಆಗ ದೈತ್ಯರು ಈ ದಾನಗಳ ಫಲವನ್ನು ತಾವೇ ಪಡೆದಕೊಳ್ಳುತ್ತಿದ್ದರು ಈ ಬಗ್ಗೆ ಚಿಂತಿಸಿದ ಬ್ರಹ್ಮದೇವನು ಒಂದು ನಿಯಮವನ್ನು ಮಾಡಿದನು, ಇನ್ನು ಮುಂದೆ ದೇವತಾ ಕಾರ್ಯಗಳಲ್ಲಿ ದರ್ಭೆ ಅಕ್ಷತೆ ಮತ್ತು ಜಲವನ್ನು ಉಪಯೋಗಿಸಬೇಕು ಹಾಗೆಯೆ ಪಿತೃ ಕಾರ್ಯಗಳಲ್ಲಿ ದರ್ಭೆ ಅಕ್ಷತೆ ಮತ್ತು ತಿಲಗಳನ್ನು ಬಳಸಬೇಕು. ಇವುಗಳು ಯಜ್ಞಾಂಗಗಳಾಗಿ ಇರುವುದರಿಂದ ದೈತ್ಯರು ಅವುಗಳ ಹತ್ತಿರ ಬರಲಾಗುವುದಿಲ್ಲ ಈ ರೀತಿ ದೇವತಾ ಪಿತೃ ಕಾರ್ಯಗಳನ್ನು ರಕ್ಷಿಸಲು ಪರಮಾತ್ಮನು ದರ್ಬೆ ಮತ್ತು ತಿಲಗಳನ್ನು ಸೃಷ್ಟಿಸಿದನು.
ಹೀಗೆ ದರ್ಭೆಯ ಬಗ್ಗೆ ಹಲವಾರು ಉಲ್ಲೇಖಗಳು ಪುರಾಣದಲ್ಲಿ ಸಿಗುತ್ತವೆ. ಈ ಎಲ್ಲ ಉಲ್ಲೇಖಗಳು ದರ್ಭೆಯ ಪಾವಿತ್ರತೆಯನ್ನು ನಮಗೆ ತೋರಿಸುತ್ತವೆ.
ಪುರಾಣದ ಹಲವಾರು ಕಥೆಗಳಲ್ಲಿ ದರ್ಭೆಯನ್ನು ಉಲ್ಲೇಖಿಸಲಾಗಿದೆ. ಕೆಲವೊಂದು ಕಥೆಗಳ ಸಾರಾಂಶ ಇಲ್ಲಿದೆ.
ಗರುಡ ರಾಜನು ತನ್ನ ತಾಯಿಯನ್ನು ದಾಸ್ಯದಿಂದ ಮುಕ್ತ ಗೊಳಿಸುವ ಸಲುವಾಗಿ ನಾಗ ಕುಲದ ಕುದ್ರುವಿನ ಪರಿವಾರಕ್ಕೆ ಸಹಾಯ ಮಾಡಲು ದೇವಲೋಕಕ್ಕೆ ಹೋಗಿ ಅಮೃತ ಕಲಶವನ್ನು ತಂದು ನಾಗ ಮಾತೆಯಾದ ಕದ್ರುವಿನ ಕೈಗೆ ಒಪ್ಪಿಸುತ್ತಾನೆ. ಆಗ ಕದ್ರುವು ಆ ಕಳಶವನ್ನು ದರ್ಭೆ ಮೇಲಿಟ್ಟು ತನ್ನ ಮಕ್ಕಳನ್ನು ಕರೆತರಲು ಹೋಗುತ್ತಾಳೆ. ಆಗ ಇಂದ್ರನು ಧಾವಿಸಿ ಬಂದು ಅಮೃತ ಕಲಶವನ್ನು ಅಪಹರಿಸಿ ದೇವಲೋಕಕ್ಕೆ ಒಯ್ದುನು. ಹಾಗೆ ಕಳಸವನ್ನು ಒಯ್ಯುತ್ತಿದ್ದಾಗ ಅಮೃತದ ಕೆಲವು ಬಿಂದುಗಳು ತುಳುಕಿ ದರ್ಭೆ ಹುಲ್ಲಿನ ಮೇಲೆ ಬಿದ್ದವು ನಂತರ ಬಂದ ಸರ್ಪಗಳು ದರ್ಭೆಯ ಮೇಲೆ ಬಿದ್ದಿದ್ದ ಅಮೃತ ಬಿಂದುಗಳನ್ನು ನೆಕ್ಕಲು ಹೋಗಿ ತಮ್ಮ ನಾಲಗೆಗಳನ್ನು ಸೀಳಿಕೊಂಡವು. ಈ ಕಾರಣದಿಂದ ಸರ್ಪಗಳಿಗೆ ಸೀಳಿದ ನಾಲಿಗೆಗಳಾಗಿ ದ್ವಿಜಿಹ (ಎರಡು )ಎಂಬ ಹೆಸರನ್ನು ಪಡೆದವು. ಅಮೃತ ಬಿಂದುಗಳು ತುಳುಕಿ ಈ ರೀತಿ ಧರ್ಭೆಗಳ ಮೇಲೆ ಬಿದ್ದಾಗ ಅವು ಅಮೃತತ್ವವನ್ನು ಪಡೆದು ಪವಿತ್ರಿ ಎಂಬ ಹೆಸರನ್ನು ಪಡೆದು, ದರ್ಭೆಗಳು ಒಂದೇ ರೀತಿಯ ಹುಲ್ಲಾಗಿದ್ದು ಅವು ಹಿಂದೂಗಳಿಗೆ ಪರಮ ಪವಿತ್ರವಾಗಿವೆ.
ದರ್ಭೆಗಳು ಏಳು ವಿಧವಾಗಿದೆ – ಕುಶ, ಕಾಶವೆಂಬ ವಿಶ್ವಾಮಿತ್ರ ದರ್ಭೆ, ಯವವೆಂಬ ಧ್ಯಾನದ ಎಲೆ, ಭತ್ತದ ಗರಿ, ಜೊಂಡು, ಬಿಳಿ ಕಮಲ ಮುಂತಾದವುಗಳು
ವಿಶ್ವಾಮಿತ್ರಾಃಕುಶಾಃಕಾಶಾಃದೂರ್ವಾ ವ್ರೀಹಯ ಏವ ಚ
ಬಲ್ವಲಾಶ್ಚ ಯವಾಶ್ಚೈವ ಸಪ್ತದರ್ಭಾಃ ಪ್ರಕೀರ್ತಿತಾಃ।।
ಇದರಲ್ಲಿ ರುದ್ರಸಂಬಂಧ ಹಾಗೂ ಆಭಿಚಾರ ಕೃತ್ಯದಲ್ಲಿ ಕಾಶ ಎಂಬ ದರ್ಭೆಯನ್ನು, ಶ್ರೌತ ಸ್ಮಾರ್ತ ಕರ್ಮಗಳಲ್ಲಿ ಕುಶವನ್ನೂ, ಋಷಿ ಪೂಜಾಗಳಲ್ಲಿ ದೂರ್ವಾವನ್ನೂ, ವೈಷ್ಣವ ಸಂಬಂಧಿ ಕಾರ್ಯದಲ್ಲಿ ವಿಶ್ವಾಮಿತ್ರ ದರ್ಭೆಯನ್ನು ಉಪಯೋಗಿಸಬೇಕೆಂದು ಶಾಸ್ತ್ರವು ತಿಳಿಸುತ್ತದೆ.
ಕಾಶಂ ತು ರೌದ್ರಂಮಾಖ್ಯಾತಂ ಕುಶಂ ಬ್ರಾಹ್ಮಂ ತಥಾ ಸ್ಮೃತಮ್
ದೂರ್ವಾತ್ವಾರ್ಷಂ ಸಮಾಖ್ಯಾತಂ ವಿಶ್ವಾಮಿತ್ರಂ ತು ವೈಷ್ಣವಮ್ ।। (ಹಾರೀತ)
ಕುಶಂ ತು ಸರ್ವಕಾರ್ಯೇಷು ಪವಿತ್ರಂ ಸ್ಮೃತಮ್ – ಎಂಬ ವಾಕ್ಯದಂತೆ ಇದು ಯಾವುದೇ ಇಲ್ಲದಿದ್ದರೆ ಕುಶ ಎಂಬ ದರ್ಭೆಯನ್ನು ಎಲ್ಲಾ ಕಾರ್ಯಗಳಲ್ಲಿಯೂ ಉಪಯೋಗಿಸಬಹುದು.
ದರ್ಭೆಯನ್ನು ಯಾವಾಗ ಆಹರಣ ಮಾಡಬೇಕು ?
ಮಾಸೇ ನಭಸ್ಯಮಾವಾಸ್ಯಾ ತಸ್ಯಾಂ ದರ್ಭೋಚ್ಚಯೋ ಮತಃ
ಅಯಾತಯಾಮಾಸ್ತೇ ದರ್ಭಾಃ ನಿಯೋಜ್ಯಾಃ ಸ್ಯುಃ ಪುನಃ ಪುನಃ ।।(ಹಾರೀತ)
🍁ಶ್ರಾವಣ ಮಾಸದ ಅಮಾವಾಸ್ಯೆಯಂದು ಕತ್ತರಿಸಿ ತಂದ ದರ್ಭೆಯು ಯಾತಯಾಮವಾಗದೇ ಯಾವತ್ತೂ ಕಾರ್ಯಗಳಿಗೆ ಬಳಸಬಹುದು.
🍁ಬೇರೆ ಅಮಾವಾಸ್ಯೆಯಂದು ತಂದ ದರ್ಭೆಯನ್ನು ಒಂದು ತಿಂಗಳು ಮಾತ್ರ ಬಳಸಬೇಕು.
🍁ಹುಣ್ಣಿಮೆಯಂದು ತಂದ ದರ್ಭೆಯು 15 ದಿನಗಳ ಕಾಲ ಶುದ್ಧ.
🍁ಮಹಾಲಯ ಅಮಾವಾಸ್ಯೆಯಂದು ತಂದ ದರ್ಭೆಯು 6 ತಿಂಗಳು ಶುದ್ಧ.
🍁ಭಾನುವಾರ ತಂದರೆ 1 ವಾರ. 🍁ಆಯಾಯ ದಿನ ತಂದರೆ ಆಯಾಯ ದಿನ ಮಾತ್ರ ಶುದ್ಧ. ಶ್ರಾವಣ ಅಮಾವಾಸ್ಯೆಯಂದು ಕತ್ತರಿಸಿ ತಂದ ದರ್ಭೆಯ ಜೊತೆಗೆ ಉಳಿದದ್ದನ್ನು ಸೇರಿಸಿದರೆ ಎಲ್ಲವೂ ಶುದ್ಧವಾಗಿ ಯಾವಾಗಲೂ ಬಳಸಬಹುದು.
ದರ್ಭೆಯ ಬಗ್ಗೆ ಇನ್ನೂ ಕೆಲವು ಚಿಂತನೆಗಳು
ಅಗ್ರಸ್ಥೂಲಂ ಭವೇನ್ನಾರೀ ಮೂಲಸ್ಥೂಲಂ ನಪುಂಸಕಂ
ಮೂಲಾದಗ್ರಸಮಂ ಪುಂಸಾಂ ದರ್ಭಾಣಾಂ ಚೈವ ಲಕ್ಷಣಮ್ ।।
ಹೀಗೆ ದರ್ಭೆಯಲ್ಲಿ ಸ್ತ್ರೀ, ಪುಂ, ನಪುಂಸಕ ಎಂದು ಮೂರು ವಿಧವಾಗಿದೆ.
ಯಾವ ಯಾವ ಕಾರ್ಯಗಳಿಗೆ ಯಾವ ಯಾವ ದರ್ಭೆಯನ್ನು ಬಳಸಬೇಕು?
ವಿವಾಹೇ ಚೈವ ಪುಂದರ್ಭಾಃ ಸ್ತ್ರೀದರ್ಭಾಃ ಚೈವ ಪುಂಸುವೇ
ಅನ್ಯಕರ್ಮಸು ಷಂಡಾಃಸ್ಯುಃ ದರ್ಭಾಣಾಂ ಚೈವ ಲಕ್ಷಣಮ್ ।।
ವಿವಾಹಾದಿ ಪುರುಷ ಸಂಸ್ಕಾರದಲ್ಲಿ ಪುಂದರ್ಭೆಯನ್ನೂ, ಪುಂಸವನಾದಿ ಸ್ತ್ರೀಸಂಸ್ಕಾರಗಳಲ್ಲಿ ಸ್ತ್ರೀದರ್ಭೆಯನ್ನೂ, ಇತರ ಕರ್ಮಗಳಿಗೆ ನಪುಂಸಕ ದರ್ಭೆಯನ್ನು ಬಳಸಬೇಕು.
ಪ್ರಾದೇಶಮಾತ್ರದ ಎರಡು ದರ್ಭೆಯು ಪವಿತ್ರ ಎನಿಸಿಕೊಳ್ಳುತ್ತದೆ. (ಅನಖಚ್ಛೇದಿತ, ಸಮೌ, ಸಾಗ್ರೌ, ತುಲ್ಯೌ ಪವಿತ್ರಾರ್ಥಂ ಗೃಹೀತ್ವಾ ಎಂದು ಅಗ್ನಿಮುಖದಲ್ಲಿ ಹೇಳಿದ ಪವಿತ್ರ ಇದೇ)
ದರ್ಭೆಯನ್ನು ಅನಾದಿ ಕಾಲದಿಂದಲೂ ಪೂಜಾಕೈಂಕಾರ್ಯಗಳಲ್ಲಿ ಯಾಕೆ ಮತ್ತು ಹೇಗೆ ಉಪಯೋಗಿಸಲಾಗುತ್ತದೆ ಅನ್ನೋದನ್ನು ನೋಡೋಣ.
ದರ್ಬೆ ಹುಲ್ಲಿನ ಉಂಗುರದ ಮಹತ್ವ –
ದರ್ಭೆಯಿಂದ ಮಾಡಿದಂತಹ ಪವಿತ್ರ ಉಂಗುರ ದರಿಸುವುದು, ಯಾವುದೇ ಪೂಜಾ, ಯಜ್ಞ, ಹೋಮ, ಹವನಗಳಲ್ಲಿ ನಡೆದುಕೊಂಡು ಬಂದ ಒಂದು ಸುಂದರ ಪುರಾತನ ಸಂಪ್ರದಾಯ. ಸಾಮಾನ್ಯವಾಗಿ ಬ್ರಾಹ್ಮಣರು ಮತ್ತು ಶ್ರೀವೈಷ್ಣವರು ನಿರ್ದಿಷ್ಟವಾಗಿ ಮಂಗಳಕರವಾಗಿರಲಿ ಅಥವಾ ಅಶುಭ ಕಾರ್ಯಕ್ರಮಗಳಗಳನ್ನು ನಿರ್ವಹಿಸುವ ವ್ಯಕ್ತಿ ದರ್ಬೆ ಹುಲ್ಲನ್ನು ನಿರ್ದಿಷ್ಟವಾದ ರೀತಿಯಲ್ಲಿ ಉಂಗುರ ಮಾಡಿ ಬಲ ಕೈಯ ಉಂಗುರ ಬೆರಳಿಗೆ ಹಾಕುತ್ತಾರೆ. ಇದರ ಹಿನ್ನೆಲೆ ಹೀಗಿದೆ – ನಾವು ಯಾವ ವೃತವಾಗಲಿ ಯಜ್ಞ ಯಾಗಾದಿಗಳಾಗಲಿ ಪೂಜಾದಿಗಳಾಗಲಿ ಇದನ್ನು ಆಚರಿಸುವಾಗ ಭಗವಂತನ ಶಕ್ತಿಯ ಜೊತೆಗೆ ದುಷ್ಟ ಶಕ್ತಿಯೂ ಇರುತ್ತವೆ. ಆಗ ನಮ್ಮ ಕೈಯಲ್ಲಿರುವ ದರ್ಭೆಯ ದರ್ಶನ ಮಾತ್ರದಿಂದ ದುಷ್ಟ ಶಕ್ತಿಯು ಅಲ್ಲಿಂದ ಓಡಿ ಹೋಗುತ್ತವೆ. ಇದು ಇಂದ್ರನ ವಜ್ರಾಯುಧವಿದ್ದಂತೆ. ಆದ್ದರಿಂದ ದರ್ಭೆಯನ್ನು ಬಳಸುತ್ತೇವೆ.
ದೇವತಾ ಕಾರ್ಯವಿರಲಿ ಪಿತೃ ಕಾರ್ಯಗಳಲ್ಲಿ ದರ್ಭೆ ಇಲ್ಲದೆ ಮಾಡುವಂತಿಲ್ಲ ಅಲ್ಲದೆ ಈ ಸಂದರ್ಭದಲ್ಲಿ ದರ್ಭೆಯಿಂದ ಮಾಡಿದ ಪವಿತ್ರವನ್ನು ಬಲಗೈ ಉಂಗುರದ ಬೆರಳಿಗೆ ಧರಿಸಬೇಕು. ಅಶುಭ ಸಂದರ್ಭಗಳಾದ ಸಾವು ಮೊದಲಾದ ಸಂದರ್ಭಗಳಲ್ಲಿ ಒಂದೇ ಎಳೆಯ ದರ್ಭೆಯನ್ನೂ,ನಿತ್ಯ ಪೂಜೆ ಹಾಗೂ ಶುಭ ಸಂದರ್ಭಗಳಲ್ಲಿ ಎರಡು ಎಳೆಯ ದರ್ಭೆಯನ್ನೂ,ಅಮಾವಾಸ್ಯೆ ಹಾಗೂ ಶ್ರಾದ್ಧ ಕರ್ಮಾದಿಗಳಲ್ಲಿ 3 ಎಳೆಯ ದರ್ಭೆಯನ್ನೂ ಮತ್ತೂ ದೇವಸ್ಥಾನಗಳಲ್ಲಿ ಮಾಡಲಾಗುವ ಪೂಜೆಗಳಲ್ಲಿ 4 ಎಳೆಯ ದರ್ಭೆಯನ್ನೂ ಪವಿತ್ರವಾಗಿ ನಮ್ಮ ಬಲಗೈ ಉಂಗುರದ ಬೆರಳಲ್ಲಿ ಧರಿಸಲಾಗುತ್ತದೆ. ಸಾಮಾನ್ಯ ಎಲ್ಲಾ ಕಾರ್ಯಗಳಲ್ಲಿ 2 ಅಥವಾ 4 ದರ್ಭೆಯಿಂದ ಮಾಡಿದ ಪವಿತ್ರವನ್ನು, ಯಾಗಾದಿಗಳಲ್ಲಿ 5 ದರ್ಭೆಯಿಂದ ಮಾಡಿದ ಪವಿತ್ರವನ್ನು, ಪಿತೃಕಾರ್ಯಗಳಲ್ಲಿ 3 ದರ್ಭೆಯಿಂದ ಮಾಡಿದ ಪವಿತ್ರವನ್ನು ಧರಿಸಬೇಕು.
ಇದಲ್ಲದೆ ದರ್ಭೆಯನ್ನು ಇನ್ನೂ ಹಲವಾರು ರೀತಿಯಲ್ಲಿ ಉಪಯೋಗಸಿಲಾಗುತ್ತದೆ.
ಮನೆಯಲ್ಲಿ ನಾವು ಮಾಡುವ ಯಾವುದೇ ಕಾರ್ಯಕ್ರಮದ ಮೊದಲಿಗೆ “ಪುಣ್ಯಾಹವಾಚನ”ಎಂಬುದಾಗಿ ಮಾಡುತ್ತಾರೆ; ಅಂದರೆ ಕಾರ್ಯಕ್ರಮ ನಡೆಯುವ ಜಾಗದ ಶುದ್ದೀಕರಣ.ಇಲ್ಲಿ ದರ್ಭೆಯ ಒಂದು ಗೊಂಚಲನ್ನು ಹಿಡಿದು ಅದರ ತುದಿಯಿಂದ ಎಲ್ಲ ಪೂಜಾ ಸಾಮಗ್ರಿಗಳ ಮೇಲೂ, ಆ ಜಾಗದ ಪ್ರತೀ ಮೂಲೆಗಳಲ್ಲೂ, ಹಾಗೂ ಅಲ್ಲಿರುವವರ ಮೇಲೂ ನೀರನ್ನು ಪ್ರೋಕ್ಷಣೆ ಮಾಡಲಾಗುತ್ತದೆ. ದರ್ಭೆಯ ತುದಿಯಲ್ಲಿ ಧ್ವನಿ ಸಂವೇದನಾ ಕಂಪನಗಳನ್ನುಂಟು ಮಾಡುವ ಶಕ್ತಿಯು ಇದೆ ಎಂದು ಹೇಳಲಾಗುತ್ತದೆ. ದರ್ಭೆಯಲ್ಲಿರುವ ಕಂಪನಾ ಶಕ್ತಿಯನ್ನು ಪಾತ್ರದಲ್ಲಿರುವ ನೀರು ಹೀರಿಕೊಳ್ಳುತ್ತದೆ. ಈ ನೀರು ಎಲ್ಲೆಲ್ಲಿ ಪ್ರೋಕ್ಷಣೆಯಾಗುತ್ತೋ ಅಲ್ಲಲ್ಲಿ ಶಕ್ತಿಯ ಸಂಚಲನ ಉಂಟಾಗುತ್ತದೆ ಎಂದು ಅದಕ್ಕಾಗಿ ಅನಾದಿ ಕಾಲದಿಂದಲೂ ನಮ್ಮ ಹಿಂದೂ ಧರ್ಮದಲ್ಲಿ ಈ ಸಂಪ್ರದಾಯವು ನಡೆದುಕೊಂಡು ಬರುತ್ತಿದೆ. ಹೀಗಾಗಿ ತುದಿಗಳಿಲ್ಲದ ದರ್ಭೆಯನ್ನು ಉಪಯೋಗಿಸುವಂತಿಲ್ಲ, ಯಾಕೆಂದರೆ ಇದರಲ್ಲಿ ಪ್ರವಹನಾ ಶಕ್ತಿಯು ನಷ್ಟವಾಗಿರುತ್ತದೆ.
ದರ್ಭೆಯನ್ನು ವೇದಗಳ ಕಾಲದಿಂದಲೂ ದೇವರ ಆಸನ ಗ್ರಹಣಕ್ಕೆ ಮುನ್ನ ಆ ಜಾಗದಲ್ಲಿ ಇರಿಸಲಾಗುತ್ತಿತ್ತು.ಸ್ವಯಂ ಶ್ರೀ ಕೃಷ್ಣ ಪರಮಾತ್ಮನಿಂದ ಭಗವದ್ಗೀತೆಯಲ್ಲಿ ದರ್ಭೆಯನ್ನು ಧ್ಯಾನಾಸನಗಳ ಭಾಗವಾಗಿದೆ ಎಂದು ಉಪದೇಶಿಸಲಾಗಿದೆ.ಧ್ಯಾನದ ಸಮಯದಲ್ಲಿ ನಮ್ಮ ಶರೀರದಿಂದ ಮುಖ್ಯವಾಗಿ ಕಾಲು ಹಾಗೂ ಕಾಲಿನ ಬೆರಳಿನಂದ ಹೊರಹೋಗುವ ಶಕ್ತಿಯನ್ನು ತಡೆಗಟ್ಟುವುದರಲ್ಲಿ ಇದು ಮುಖ್ಯ ಪಾತ್ರ ವಹಿಸುತ್ತದೆ.ಹೋಮ ಹವನಾದಿಗಳಲ್ಲಿ ದರ್ಭೆಯನ್ನು ಹೋಮ ಕುಂಡದ ಸುತ್ತಲೂ 4 ಬದಿಯಲ್ಲೂ ಹಾಕಲಾಗುವುದು ಇದನ್ನು ಪರಿಸ್ಥರಣ ಅನ್ನುತ್ತಾರೆ. ಅಂದರೆ ಇದು ದೇವರ ಆಸನವಾಗಿದೆ.
ಅನೇಕ ವರುಷಗಳಿಂದಲೂ ಮನೆಯ ಹಿರಿಯರು ಚಂದ್ರ ಹಾಗೂ ಸೂರ್ಯ ಗ್ರಹಣದ ಸಂದರ್ಭದಲ್ಲಿ ಗ್ರಹಣ ದಿಂದ ಬರುವ ಅಲ್ಟ್ರ ವೈಲೆಟ್ ಕಿರಣಗಳಿಂದ ನೀರು ಹಾಗೂ ಆಹಾರ ಸಾಮಾಗ್ರಿಗಳನ್ನು ರಕ್ಷಿಸಲು ಇವುಗಳ ಮೇಲೆ ಈ ದರ್ಭೆಯನ್ನು ಇಡುತ್ತಿದ್ದರು.ಇಂದಿಗೂ ಈ ಪ್ರತೀತಿ ಜಾರಿಯಲ್ಲಿದೆ.ಗ್ರಹಣ ಕಾಲದಲ್ಲಿ ಸಂಭವಿಸಬಹುದಾದ ದುಷ್ಟ ಪರಿಣಾಮಗಳನ್ನು ತಡೆಯಲು ದರ್ಭೆಗಳನ್ನು ನೀರು ತಿಂಡಿ ತಿನಿಸುಗಳು ಮುಂತಾದವುಗಳ ಮೇಲೆ ಹರಡುತ್ತಾರೆ.
ಧಾರ್ಮಿಕ ಪರಂಪರೆಯ ಪ್ರಕಾರ ದರ್ಭೆಯನ್ನು ಎಲ್ಲ ದಿನಗಳಲ್ಲೂ ಕೀಳುವಂತಿಲ್ಲ ಹಾಗೂ ತುಂಡರಿಸುವಂತಿಲ್ಲ.ಇದನ್ನು ಕೇವಲ ಹುಣ್ಣಿಮೆಯ ಮರುದಿನ ಬರುವ ಕೃಷ್ಣ ಪಕ್ಷದ ಪಾಡ್ಯದಂದು ಮಾತ್ರ ಕೀಳಲಾಗುತ್ತದೆ.
ಅಯುರ್ವೇದದಲ್ಲಿ ಇದಕ್ಕೆ ತನ್ನದೇ ಆದ ಮಹತ್ವ ಇದೆ. ಅನೇಕ ಸಂದರ್ಭಗಳಲ್ಲಿ ವಿಶೇಷವಾಗಿ ಭೇದಿ, ಋತುಸ್ರಾವ ಹಾಗೂ ಮೂತ್ರ ಸಂಬಂಧಿ ದೋಷ ಮೊದಲಾದವುಗಳಲ್ಲಿ ಇವು ಚಿಕಿತ್ಸಾತ್ಮಕ ಶಕ್ತಿಯಾಗಿಯೂ ಪರಿಣಮಿಸುತ್ತದೆ ಎಂದು ನಂಬಲಾಗಿದೆ.

